ಲಕ್ಷ್ಮೀಶ ೧೬ನೆಯ(1550) ಶತಮಾನದಲ್ಲಿದ್ದ ಕವಿ ಎಂದು ಭಾವಿಸಲಾಗಿದೆ. ಜೈಮಿನಿ ಭಾರತ ಲಕ್ಷ್ಮೀಶನ ಪ್ರಸಿದ್ಧ ಕಾವ್ಯ. ಇದು ಸಂಸ್ಕೃತ ಜೈಮಿನಿ ಭಾರತದ ಕನ್ನಡ ರೂಪವಾಗಿದ್ದು ವಾರ್ಧಕ ಷಟ್ಪದಿಯಲ್ಲಿದೆ.ಈತನಿಗೆ 'ಕರ್ನಾಟಕ ಕವಿಚೂತವನ ಚೈತ್ರ'ಎಂಬ ಬಿರುದಿದ್ದಿತು. ಅವನು ತನ್ನ ವಿಷಯವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ:
"ವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ|
ರದ್ವಾಜಗೋತ್ರ ಭವನಣ್ಣಮಾಂಕನ ಸುತಂ|
ಸದ್ವಿನುತ ಕರ್ನಾಟಕವಿಚೂತವನಚೈತ್ರ ಲಕ್ಷ್ಮೀಶನೆಂಬೋರ್ವನು||
ಅವನ ಕಾವ್ಯದಿಂದ ನಮಗೆ ತಿಳಿಯುವುದು, ಅವನು ಭರದ್ವಾಜ ಗೋತ್ರದ ಅಣ್ಣಮಾಂಕನ ಮಗ ಎಂದು ಮಾತ್ರಾ.
ಲಕ್ಷ್ಮೀಶನ ಕಾಲ ಸ್ಪಷ್ಟವಾಗಿ ತಿಳಿದಿಲ್ಲ. ಅವನು ಹದಿನಾಲ್ಕನೇ ಶತಮಾನದಿಂದ ಹದಿನೇಳನೇ ಶತಮಾನದ ನಡುವಿನ ಕಾಲದಲ್ಲಿದ್ದ ಬ್ರಾಹ್ಮಣ ಕವಿ. ಹದಿನಾರು - ಹದಿನೇಳನೇ ಶತಮಾನದವನೆಂಬುದಕ್ಕೆ ಹೆಚ್ಚು ಸಂಶೋಧಕರ ಒಲವಿದೆ. ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆಯ ಹತ್ತಿರದ ದೇವನೂರಿನವನು. ಸ್ಮಾರ್ತ ಬ್ರಾಹ್ಮಣನಾಗಿದ್ದು ಅದ್ವೈತದ ಅನುಯಾಯಿ. ಶ್ರೀರಾಮಾನುಜರ ಮತವಾದ ಶ್ರೀವೈಷ್ಣವನಿರಬಹುದೆಂದೂ ಕೆಲವರು ಊಹಿಸುವರು.
ವ್ಯಾಸಭಾರತದಲ್ಲಿ ಅಶ್ವಮೇಧ ಪರ್ವವು ಅಷ್ಟು ವಿಸ್ತಾರವಾಗಿಲ್ಲ. ವ್ಯಾಸಮುನಿಯ ಪ್ರಿಯ ಶಿಷ್ಯನಾದ ಜೈಮಿನಿ ಮುನಿಯು ಅಶ್ವಮೇಧ ಪರ್ವವನ್ನು ವಿಸ್ತಾರವಾದ ಕಥಾ ಸಂವಿಧಾನದೊಡನೆ ಸಂಸ್ಕೃತದಲ್ಲಿ ರಚಿಸಿದ್ದಾನೆ. ಲಕ್ಷ್ಮೀಶನು ಅದನ್ನು ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಕನ್ನಡಕ್ಕೆ ಸ್ವಂತ ಕಾವ್ಯವೋ ಎನ್ನುವಂತೆ ಅಲಂಕಾರ, ನವರಸಭರಿತಾವಾಗಿ ರಚಿಸಿರುವುದೇ ಕನ್ನಡ ಜೈಮಿನಿ ಭಾರತ. ಈ ಕಾವ್ಯದಲ್ಲಿ ಭಾಗವತ ದೃಷ್ಟಿಯೇ ಎಂದರೆ ಕೃಷ್ಣನ ಮಹಿಮೆ ಇದರ ವಿಶೇಷವೆನ್ನಬಹುದು. ವ್ಯಾಸ ಭಾರತದ ಮೊದಲ ೧೦ ಪರ್ವಗಳನ್ನು ಕುಮಾರವ್ಯಾಸನು ಕನ್ನಡಕ್ಕೆ ತಂದರೆ ಉಳಿದ ಎಂಟು ಪರ್ವಗಳನ್ನು ತಿಮ್ಮಣ್ಣ ಕವಿಯು ಕನ್ನಡದಲ್ಲಿ ಮೂಡಿಸಿದ್ದಾನೆ. ಲಕ್ಷ್ಮೀಶನು ಮಹಾಭಾರತದ ಅಶ್ವಮೇದ ಪರ್ವವನ್ನು ಮಾತ್ರಾ ವಿಸ್ತರಿಸಿ ಬರೆದಿದ್ದಾನೆ.
...
https://www.youtube.com/watch?v=qIaIlmMIpcA